Welcome to sunamipatrike   Click to listen highlighted text! Welcome to sunamipatrike
Thursday, May 22, 2025
HomeUncategorizedರಾಹುಲ್ 'ಕೈ' ಯಲ್ಲಿದ್ದ ಆ ಒಂದು ಅಸ್ತ್ರವೂ ಮೋದಿ ಬತ್ತಳಿಕೆ ಸೇರಿತು!

ರಾಹುಲ್ ‘ಕೈ’ ಯಲ್ಲಿದ್ದ ಆ ಒಂದು ಅಸ್ತ್ರವೂ ಮೋದಿ ಬತ್ತಳಿಕೆ ಸೇರಿತು!

  • ಸುನಾಮಿನ್ಯೂಸ್, ಮೇ,1

* ಹುಳ್ಳಿಪ್ರಕಾಶ, ಸಂಪಾದಕರು

“ಕೈ” ಯಲ್ಲಿದ್ದ ಆ ಒಂದು ಅಸ್ತ್ರವೂ ಮೋದಿ ಬತ್ತಳಿಕೆ ಸೇರಿತು! ‘ಜಜಾ’ ಗಣತಿ ಘೋಷಣೆಯೊಂದಿಗೆ ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ದ ಮೈತ್ರಿಕೂಟಕ್ಕೆ ಮಾರ್ಮಾಘಾತದ ಪೆಟ್ಟು ಕೊಟ್ಟ ನರೇಂದ್ರ!

ದೇಶದಲ್ಲಿ ವಾಸಿಸುತ್ತೀರುವ ಭಾರತೀಯ ನಾಗರೀಕರ ಅವರು ಪ್ರತಿನಿಧಿಸುತ್ತೀರುವ ಜಾತಿಯನ್ನು ಸೇರಿಸಿಕೊಂಡು ಗಣತಿ ಮಾಡುವ ಕಾರ್ಯವನ್ನು ಏಕಕಾಲಕ್ಕೇನೆ ದೇಶದ ಉದ್ದಗಲಕ್ಕೂ ಬೃಹತ್ ಪ್ರಮಾಣದಲ್ಲಿ ಕೈಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರದಲ್ಲಿನ ಒಕ್ಕೂಟ ಸರ್ಕಾರವು ಬುಧವಾರ ಗಟ್ಟಿ ನಿರ್ಧಾರ ಕೈಗೊಂಡಿದೆ.

ಪ್ರಧಾನಿಗಳ ಅಧ್ಯಕ್ಷತೆಯಲ್ಲಿ ಬುಧವಾರ ಜರುಗಿದ ರಾಜಕೀಯ ವ್ಯವಹಾರಗಳ ಸಮಿತಿಯಲ್ಲಿ ಪಾರದರ್ಶಕವಾಗಿ ಜಾತಿಗಣತಿ ಮಾಡುವ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟದ ಒಕ್ಕೂಟ ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರ ಈ ಹೊತ್ತಿನ ಭಾರತದ ರಾಜಕಾರಣದಲ್ಲಿ ಬಹುದೊಡ್ಡ ರಾಜಕೀಯ ಸಂಚಲನಾಕ್ಕೆ ಎಡೆ ಮಾಡಿಕೊಟ್ಟಿದೆ.
ಆಗೇನೆ, ಈ ನಿರ್ಧಾರ ದೇಶದ ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳಲ್ಲಿ ಕೌತುಕವನ್ನುಂಟು ಮಾಡಿದೆ ಸಹ.

ಏಕೆಂದರೆ, ಬಿಜೆಪಿಯಂತಹ ಬಲಪಂಥೀಯ ಸಿದ್ದಾಂತದ ಪ್ರಬಲ ಪ್ರತಿಪಾದಕ ಪಕ್ಷದ ನೇತಾರಾಗಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು, ಜಾತಿ ಗಣತಿ ಮಾಡುವ ನಿರ್ಧಾರವನ್ನು ಕೈಗೊಳ್ಳುತ್ತಾರೆನ್ನುವ ಸಣ್ಣ ಊಹೆಯನ್ನು ಕೂಡ ಜಾತಿ ಗಣತಿಯ ಅಸ್ತ್ರವನ್ನಿಡಿದು ಕೊಂಡೇ ಮೋದಿ ಅವರನ್ನು ಮಣಿಸಲು ಅವರ ವಿರುದ್ಧವಾಗಿ ರಣಕಣಕ್ಕೆ ಇಳಿದಿರುವ ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ಸಹಿತ ಅವರ ನೇತೃತ್ವದ ಇಂಡಿಯಾ ಮೈತ್ರಿಕೂಟದ ಅಖಿಲೇಶ್ ಯಾದವ್, ತೇಜಸ್ವಿ ಯಾದವ್, ಸ್ಟಾಲಿನ್, ಶರದ್ ಪವಾರ್, ಸೊರೆನ್ ಸಹಿತ ವಿರೋಧಿ ಮುಖಂಡರುಗಳ ಮನದಲ್ಲಿ ಮೂಡಿರಲಿಲ್ಲ.

ಆದರೇ ಜಾತಿಗಣತಿ ಎನ್ನುವುದು ಪ್ರಬಲವರ್ಗದ ಅಧಿಕಾರಕ್ಕೆ ಸವಾಲ್ ಆಗುವ ಪಥ. ಈ ಪಥದ ವಿರುದ್ಧವಾಗಿಯೇ ಬಹುತೇಕ ಸಾಗುತ್ತಿದ್ದವರು ಇದ್ದಕ್ಕಿದ್ದಂತೆಯೇ ಯು ಟರ್ನ್ ತಗೊಂಡು ಜಾತಿ ಗಣತಿ ಪಥವನ್ನೇರಿದ್ದು ಊಹೆಗೂ ನಿಲುಕದ ನಡೆಯೇ ಸರಿ!

ಹೀಗಾಗಿ ಜನಗಣತಿ ಜೊತೆ,ಜೊತೆಯಲ್ಲಿಯೇ ದೇಶದಲ್ಲಿ ಜನರು ಪ್ರತಿನಿಧಿಸುತ್ತೀರುವ ಜಾತಿಗಳನ್ನು ಕೂಡ ಗಣತಿ ಮಾಡುವ ಈ ನಿರ್ಧಾರ ಪ್ರಸ್ತುತ ಭಾರತೀಯ ರಾಜಕಾರಣದಲ್ಲಿ ಈಕ್ಷಣದ ಐತಿಹಾಸಿಕ ನಿರ್ಣಾಯವೇ ಸರಿ!

ಆಗೇನೆ, ಬಹುಮುಖ್ಯವಾಗಿ ಇದರ ಪರಿಣಾಮ ನೇರವಾಗಿ ಆಗುವುದು ಕಾಂಗ್ರೆಸ್ ಪಕ್ಷದ ಮೇಲೆ! ಏಕೆಂದರೆ, ಒಂದೇರೆಡು ರಾಜ್ಯಗಳನ್ನು ಬಿಟ್ಟರೇ ಇಡೀ ದೇಶದಲ್ಲಿ ಸಂಪೂರ್ಣ ಅಸ್ತಿತ್ವ ಕಳೆದುಕೊಂಡಿರುವ ಕಾಂಗ್ರೆಸಿಗೆ ಜಾತಿಗಣತಿ ಅಸ್ತ್ರ ಮುಖ್ಯವಾಗಿ ಅಹಿಂದ ವರ್ಗದಲ್ಲಿ ವರ್ಕೌಟ್ ಆಗುವ ಸಾಧ್ಯತೆ ಇತ್ತು.

ಈ ಕಾರಣಕ್ಕೇನೆ ಏಪ್ರಿಲ್ ಎರಡನೇಯ ವಾರ ಗುಜರಾತ್ ನಲ್ಲಿ ಜರುಗಿದ ಎಐಸಿಸಿ ಸಮಾವೇಶದಲ್ಲಿ ಜಾತಿಗಣತಿ ಪಕ್ಷದ ಪ್ರಮುಖ ಹಕ್ಕೋತ್ತಾಯವಾಗಿ ಮಂಡನೆಯಾಗಿ, ಪ್ರತಿನಿಧಿಗಳ ಒಕ್ಕೋರಲಿನಿಂದ ಈ ನಿರ್ಣಾಯ ತೇರ್ಗಡೆಗೊಂಡಿತ್ತು.

ಜೊತೆಗೆ ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಪ್ರಾದೇಶಿಕ ಮಟ್ಟದಲ್ಲಿ ಬಲಿಷ್ಠವಾಗಿರುವ, ಬಲಪಂಥೀಯ ಸಿದ್ದಾಂತಕ್ಕೆ ಬಹುದೊಡ್ಡ ಪ್ರತಿರೋಧಕ ಶಕ್ತಿಗಳಾಗಿರುವ ಡಿಎಂಕೆ, ಎಸ್ಪಿ, ಆರ್ ಜೆಡಿ, ಜೆಎಂಎಂ ಸಹಿತ ಪ್ರಮುಖ ವಿರೋಧ ಪಕ್ಷಗಳು ಕೂಡ ಕಾಂಗ್ರೆಸ್ ನಿರ್ಮಿಸಿದ್ದ ಜಾತಿಗಣತಿ ಪಥವನ್ನೇ ಅಧಿಕಾರ ಹಿಡಿಯಲು ಪ್ರಮುಖ ಪಥವನ್ನಾಗಿ ಮಾಡಿಕೊಂಡಿದ್ದವು.

ಆದರೇ ಈಗ ಪ್ರಧಾನಮಂತ್ರಿಗಳ ನೇತೃತ್ವದ ಒಕ್ಕೂಟ ಜನರ ಜೊತೆಗೆ ಜಾತಿ ಗಣತಿ ಮಾಡುವ ನಿರ್ಧಾರ ಕಾಂಗ್ರೆಸ್ ಸಹಿತ ಇಂಡಿಯಾ ಮೈತ್ರಿ ಬಳಗದ ನೆಲೆಗಟ್ಟೇ ಅಲ್ಲಾಡುವ ಸಾಧ್ಯತೆಗಳನ್ನು ತಳ್ಳಿಹಾಕಲಾಗದು ಎನ್ನುತ್ತಾರೆ ರಾಷ್ಟ್ರದ ರಾಜಕೀಯ ತಜ್ಞರು.

ಏಕೆಂದರೆ, ರಾಷ್ಟ್ರ ವ್ಯಾಪ್ತಿ ಜಾತಿ ಗಣತಿಯನ್ನು ಮಾಡಬೇಕು ಎನ್ನುವ ಕೂಗನ್ನು ಕೂಗಿದ್ದೆ ಕಾಂಗ್ರೆಸ್ ನೇತಾರ, ಲೋಕಸಭೆಯ ಪ್ರತಿಪಕ್ಷ ನಾಯಕರಾದ ರಾಹುಲ್ ಗಾಂಧಿ. ಈ ಜಾತಿ ಗಣತಿಯ ಅಸ್ತ್ರವನ್ನು ಝಳಪಿಳಿಸುತ್ತಲೇ ಪ್ರಧಾನಿ ಮೋದಿ ಅವರ ಆಡಳಿತರೂಢ ಬಿಜೆಪಿಯನ್ನು ಮಣಿಸಿ, ಅಣಿದು ಹಾಕಲು ರಾಹುಲ್ ಕಳೆದೊಂದು ವರ್ಷದಿಂದ ಜೋರಾದ ತಾಲೀಂ ಶುರು ಹಚ್ಚಿಕೊಂಡಿದ್ರು.

ಇತ್ತ, ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟಕ್ಕೂ ರಾಹುಲ್ ತಯಾರಿಸಿದ್ದ ಜಾತಿ ಗಣತಿ ಎನ್ನುವುದು ಬಿಜೆಪಿಯನ್ನು ಎದುರಿಸಲು ಪ್ರಬಲ ಅಸ್ತ್ರವೂ ಆಗಿ ಶಸ್ತ್ರಗಾರದಲ್ಲಿ ಮುಂಚೂಣಿಯಲ್ಲಿ ನಿಂತಿತ್ತು. ಜಾತಿ ಗಣತಿಯ ಈ ಅಸ್ತ್ರವನ್ನೇ ಪ್ರಯೋಗಿಸಿ ಬರಲಿರುವ ಬಿಹಾರ, ಪಶ್ಚಿಮಬಂಗಾಳ, ಕೇರಳ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಯನ್ನು ಹೆಡೆಮುರಿಗಿ ಕಟ್ಟಲು ಇಂಡಿಯಾದ ನಾಯಕರುಗಳು ಚದುರಂಗ ನಿರ್ಮಾಣದತ್ತ ಮಗ್ನರಾಗಿದ್ರು.

ಮೇಲ್ವರ್ಗದ ಸಾರಥ್ಯದ ಸಂಘ ಪರಿವಾರದ ಹಿಡಿತದಲ್ಲಿರುವ ಬಿಜೆಪಿ ಯಾವುದೇ ಕಾರಣಕ್ಕೂ ಜಾತಿ ಗಣತಿಗೆ ಒಪ್ಪುವುದಿಲ್ಲ ಎಂದು ಕೊಂಡವರೇನೆ ಹೆಚ್ಚಿದ್ರು. ಆದರೇ ಯಾರು ಕೂಡ ಪ್ರಧಾನಿ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಜಾತಿ ಗಣತಿಗೆ ಇಷ್ಟು ಬೇಗ, ಅದು ದಿಢೀರ್ ಆಗಿ ಮುಂದಾಗುತ್ತೆ ಎನ್ನುವ ಸಾಸಿವೆಯಷ್ಟು ಪರಿಕಲ್ಪನೆ ಕೂಡ ಮಾಡಿರಲಿಲ್ಲ ಸಹ!

ಆದರೇ ದಿಡೀರ್ ಆಗಿ ಜನ ಗಣತಿ ಜೊತೆಗೆ ಜಾತಿ ಗಣತಿಯನ್ನು ಮಾಡಲಾಗುವುದು ಎನ್ನುವ ಮೂಲಕ ರಾಹುಲ್ ಗಾಂಧಿ ಮತ್ತವರ ಇಂಡಿಯಾ ಮೈತ್ರಿ ಬಳಗಕ್ಕೆ ಬಹು ದೊಡ್ಡ ಮಾರ್ಮಘಾತವನ್ನುಂಟುಮಾಡಿದ್ದಾರೆ ನರೇಂದ್ರಮೋದಿ ಎನ್ನುವ ಮಾತುಗಳು ದೇಶದ ತುಂಬನೂ ಈಗ ಬಲು ಜೋರಾಗಿವೆ.

ಇತ್ತ ಶೈಕ್ಷಣಿಕ ಮತ್ತು ಸಾಮಾಜಿಕ ಹಿಂದುಳಿಕೆಯನ್ನು ಗುರುತಿಸಲು ಮಾಡಿದ್ದ ಸಮೀಕ್ಷಾ ವರದಿಯನ್ನೇ ಜಾತಿ ಗಣತಿ ಎಂದು ಬಿಂಬಿಸಿ ಆ ಮೂಲಕ ಅಹಿಂದ ಮತ ವರ್ಗದಲ್ಲಿ ಇಮೇಜ್ ಹೆಚ್ಚಿಸಿಕೊಳ್ಳಲು ಕರ್ನಾಟಕದ ಸಿಎಂ ಸಿದ್ದರಾಮಯ್ಯ ಮತ್ತವರ ಬೆಂಬಲಿಗರು ಉರುಳಿಸಿದ್ದ ದಾಳಗಳು ಪ್ರಧಾನಿ ನರೇಂದ್ರಮೋದಿ ಅವರ ಜಾತಿಗಣತಿ ನಿರ್ಧಾರದ ಎದುರು ಮಹತ್ವ ಕಳೆದುಕೊಳ್ಳೊದೇ ಹೆಚ್ಚು.

ಆಗೇನೆ ಪಕ್ಕದ ತೆಲಂಗಾಣ, ದೂರದ ಬಿಹಾರದಲ್ಲಿ ಮಾಡಿದ್ದ ಜಾತಿ ಗಣತಿಗಳಿಗೂ ಇದೇ ಗತಿ ಬರುವುದು ಖಚಿತ ಕೂಡ ಎನ್ನುವುದು ವರ್ತಮಾನ ರಾಜಕಾರಣದ ವಿಶ್ಲೇಷಣೆಯು ಹೌದಾಗಿದೆ.

* ಹುಳ್ಳಿಪ್ರಕಾಶ, ಸಂಪಾದಕರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
Click to listen highlighted text!