- ಸುನಾಮಿನ್ಯೂಸ್, ಜೂನ್,23
- ಬೆಂಗಳೂರು
* ಹುಳ್ಳಿಪ್ರಕಾಶ, ಸಂಪಾದಕರು
ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ಕೃಷ್ಣಾ ಮೇಲ್ದಂಡೆ ಮುಳುಗಡೆ ಸಂತ್ರಸ್ತರ ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಜಲಸಂಪನ್ಮೂಲ ಸಚಿವರಾದ ರಾಮಲಿಂಗರೆಡ್ಡಿ ಅವರಲ್ಲಿ, ಕರ್ನಾಟಕ ಕಾಂಗ್ರೆಸ್ ಪಕ್ಷದ ಹಿರಿಯ ನೇತಾರರು, ವಿಧಾನ ಪರಿಷತ್ತಿನ ನಿಕಟ ಪೂರ್ವ ವಿಪಕ್ಷ ನಾಯಕರು ಆದ ಎಸ್ಸಾರ್ ಪಾಟೀಲ್ ಅವರು ವಿನಂತಿಸಿದ್ದಾರೆ.
ಸೋಮವಾರ ರಾಜಧಾನಿ ಬೆಂಗಳೂರಿನಲ್ಲಿ
ಕರ್ನಾಟಕ ಸರ್ಕಾರದ ನೂತನ ನೀರಾವರಿ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ರಾಮಲಿಂಗರೆಡ್ಡಿ ಅವರನ್ನು ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ಕೃಷ್ಣಾ ನದಿ ಮುಳುಗಡೆ ಸಂತ್ರಸ್ತರೊಂದಿಗೆ ಭೇಟಿಯಾಗಿ ಎಸ್ಸಾರ್ ಪಾಟೀಲರು ಅಭಿನಂದಿಸಿದರು.
ಯೋಜನೆಯ ತ್ವರಿತ ಅನುಷ್ಠಾನದ ಜೊತೆ,ಜೊತೆಗೇನೆ ಸಂತ್ರಸ್ತರ ಸಮಸ್ಯೆಗಳನ್ನು ಕೂಡ ಮಾನವೀಯತೆ ಹಾಗೂ ತಾಯಿಹೃದಯದಿಂದ ಪರಿಗಣಿಸಬೇಕು, ತಾಯಿನಾಡಿಗಾಗಿ ತಮ್ಮ ಬದುಕನ್ನೇ ಅರ್ಪಣೆ ಮಾಡುವ ಅವರಿಗೆ ಯಾವುದೇ ಹಂತದಲ್ಲೂ ಅನ್ಯಾಯವಾಗದಂತೆ ಇಲಾಖಾ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆಯೂ ನೂತನ ಜಲಸಂಪನ್ಮೂಲ ಸಚಿವರಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿ ನಿಕಟಪೂರ್ವ ಕಾರ್ಯಾಧ್ಯಕ್ಷರು ಆಗಿರುವ ಎಸ್ಸಾರ್ ಪಾಟೀಲ್ ಅವರು ವಿನಂತಿಸಿದರು.
ನೀರಾವರಿ ಭೂಮಿಗೆ ಪ್ರತಿ ಎಕರೆಗೆ ₹40 ಲಕ್ಷ ರೂ, ಹಾಗೂ ಖುಷ್ಕಿ ಭೂಮಿಗೆ ಪ್ರತಿ ಎಕರೆಗೆ ₹30 ಲಕ್ಷ ರೂ ಪರಿಹಾರವನ್ನು ಸರ್ಕಾರ ನಿಗದಿ ಪಡಿಸಿ ಈಗಾಗಲೇ ಘೋಷಿಸಿದೆ. ಆ ಪ್ರಕಾರವೇ ತ್ವರಿತಗತಿಯಲ್ಲಿ ನೀಡುವಂತೆ ಮನವಿ ಮಾಡಿ, ಯೋಜನೆ ವಿಳಂಬದ ಹಿನ್ನೇಯಲ್ಲಿ ಮುಂದಿನ ವರ್ಷದಿಂದ ಪರಿಹಾರ ಮೊತ್ತಕ್ಕೆ ಪ್ರತಿ ವರ್ಷ 15% ಹೆಚ್ಚುವರಿ ಮೊತ್ತವನ್ನು ಸರ್ಕಾರ ಸಂತ್ರಸ್ತರಿಗೆ ನೀಡುವಂತೆಯೂ ಸಚಿವರನ್ನು ಒತ್ತಾಯಿಸಿದರು.
ಮಾಜಿ ಸಚಿವರಾದ ಅಜಯಕುಮಾರ ಸರನಾಯಕ, ಜೆ.ಟಿ. ಪಾಟೀಲ, ಮುತ್ತು ದೇಸಾಯಿ ಸೇರಿದಂತೆ ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ಹಲವಾರು ಸಂತ್ರಸ್ತರು ಈ ಸಮಯದಲ್ಲಿ ಎಸ್ಸಾರ್ ಪಾಟೀಲರ ಜೊತೆಗಿದ್ದು ನೂತನ ನೀರಾವರಿ ಸಚಿವರನ್ನು ಅಭಿನಂದಿಸಿದರು.
- ಹುಳ್ಳಿಪ್ರಕಾಶ, ಸಂಪಾದಕರು, ಸುನಾಮಿನ್ಯೂಸ್, ಬೆಂಗಳೂರು.
