*ಸುನಾಮಿನ್ಯೂಸ್, ಜೂನ್,17
ನಾಣಿಕೇರಿ ಅಂಜನೇಯಸ್ವಾಮಿ ದೇವಸ್ಥಾನವನ್ನು ಸುಂದರೀಕರಣಗೊಳಿಸುವ ಜೊತೆಗೆ ಇಲ್ಲಿಗೆ ಬರುವಂತಹ ಭಕ್ತರಿಗೆ ಶುದ್ಧ ಕುಡಿಯುವ ನೀರು, ನೆರಳು, ಬೆಳಕು, ಪ್ರದಕ್ಷಿಣೆ ಹಾಕಲು ಉತ್ತಮ ನೆಲಹಾಸು ಪ್ರಾಂಗಣ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು ಎಂದು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕರಾದ ಕೆ.ನೇಮಿರಾಜನಾಯ್ಕ್ ಹೇಳಿದ್ದಾರೆ.
ಮಂಗಳವಾರ ಬೆಳಿಗ್ಗೆ ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ಪಟ್ಟಣದ ರಾಮನಗರದ ಗುರುಭವನದ ಬಳಿ ಇರುವ ನಾಣಿಕೆರಿ ಅಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ದೇವಸ್ಥಾನದ ಪುನರುಜ್ಜೀವನ ಕಾಮಗಾರಿಗೆ ಶಾಸಕರು ಭೂಮಿ ಪೂಜೆ ನೇರವೇರಿಸಿ, ‘ಸುನಾಮಿನ್ಯೂಸ್’ ಜೊತೆಗೆ ಮಾತನಾಡಿದರು.
ಈ ದೇವಸ್ಥಾನ ಸಹಸ್ರಾರು ಭಕ್ತರನ್ನು ಹೊಂದಿದ್ದು, ಪ್ರತಿ ಶನಿವಾರ ಮತ್ತು ಹಬ್ಬ,ಹರಿದಿನದಂತಹ ವಿಶೇಷ ಸಂದರ್ಭಗಳಲ್ಲಿ ಭಕ್ತರ ಮಹಾಪೂರವೇ ಇಲ್ಲಿಗೆ ಭೇಟಿಕೊಟ್ಟು, ಸ್ವಾಮಿ ಆರ್ಶೀವಾದ ಪಡೆಯುತ್ತಾರೆ. ಹೀಗೆ ಬರುವ ಭಕ್ತರಲ್ಲಿ ನಾನು, ನನ್ನಕುಟುಂಬ ಕೂಡ ಒಂದಾಗಿದ್ದು. ದೇವಸ್ಥಾನ ಪುನರುಜ್ಜೀವನಗೊಳಿಸುವ ಬೇಡಿಕೆಯನ್ನು ಹಲವು ಸಲ ಭಕ್ತರು ನನ್ನ ಗಮನಕ್ಕೆ ತಂದಿದ್ದರು.
ಚುನಾವಣೆಯಲ್ಲಿ ಜಯಸಾಧಿಸಿದರೇ ಈ ದೇವಸ್ಥಾನವನ್ನು ಪುನರುಜ್ಜೀವನಗೊಳಿಸಿ, ಭಕ್ತರಿಗೆ ನಾಗರೀಕ ಸೌಲಭ್ಯ ಕಲ್ಪಿಸುವ ಹರಕೆ ಹೊತ್ತಿದ್ದೆ ಆಂಜನೇಯನ ಕೃಪೆಯಿಂದ ಗೆದ್ದು ಶಾಸಕನಾದೆ, ಈಗ ಹರಕೆ ತೀರಿಸುವ ಕಾಯಕ ಮಾಡುತ್ತೀರುವೆ ಎಂದರು.
ಅಂದಾಜು 50 ಲಕ್ಷರೂಪಾಯಿಗಳ ಅನುದಾನದಲ್ಲಿ ದೇವಸ್ಥಾನದ ನವೀಕರಣಗೊಳಿಸಲಾಗುವುದು. ಆರಂಭದಲ್ಲಿ ಗುಡಿ ಹೊರಗಿನ ನೆಲಹಾಸು ಪ್ರಾಂಗಣವನ್ನು ಚೆಂದವಾಗಿ ನಿರ್ಮಿಸುವ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದ ಶಾಸಕರು ಈಗಾಗಲೇ ಕುಡಿಯುವ ನೀರಿಗಾಗಿ ಕೊಳವೆಬಾವಿಯನ್ನು ಕೊರೆಸಲಾಗಿದೆ, ಐದು ಇಂಚಿನಷ್ಟು ಸಮೃದ್ಧನೀರು ಸಿಕ್ಕಿದೆ ಎಂದರು.
ಅಗತ್ಯದಷ್ಟು ಗ್ರಾನೈಟ್ ಕಲ್ಲು ಈಗಾಗಲೇ ಬಂದಿದ್ದು ನಾಳೆಯಿಂದ ನೆಲಹಾಸು ಕಾಮಗಾರಿಯನ್ನು ಆರಂಭಿಸಲಾಗುವುದು. ಇದರ ಜೊತೆಯಲ್ಲಿಯೇ ಸುಂದರ ಗೋಪುರ ನಿರ್ಮಿಸುವ ಕೆಲಸ ಕೂಡ ಆರಂಭಿಸಲಾಗುವುದು ಎಂದರು.
ತ್ವರಿತ ಮತ್ತು ಗುಣಮಟ್ಟದಲ್ಲಿ ಪೂರ್ತಿಗೊಳಿಸಲಾಗುವುದು. ಎಲ್ಲಾ ಕಾಮಗಾರಿಗಳು ಪೂರ್ಣಗೊಂಡ ಮೇಲೆ ದೇವಸ್ಥಾನದ ಗೇಟಪ್ ಸಂಪೂರ್ಣ ಬದಲಾಗಲಿದ್ದು ಹೊಸ ಭಕ್ತರನ್ನು ಸೆಳೆಯುವಂತೆ ಆಕರ್ಷಕವಾಗಿ ದೇವಸ್ಥಾನ ಕಂಗೊಳಿಸಲಿದೆ ಎಂದು ಶಾಸಕ ನೇಮಿರಾಜನಾಯ್ಕ್ ವಿಶ್ವಾಸ ವ್ಯಕ್ತಪಡಿಸಿದರು.
ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಮುಖಂಡರಾದ ಬಾದಾಮಿ ಮೃತ್ಯುಂಜಯ, ಕನ್ನಿಹಳ್ಳಿ ಚಂದ್ರಶೇಖರ, ಬಡಿಗೇರ ಸಿದ್ದರಾಜ್, ಶಿವಕುಮಾರಶೆಟ್ರು, ಚಿದ್ರಿ ಸತೀಶ್, ಎಲಿಗಾರ ಮಂಜುನಾಥ, ಬುಲೇಟ್ ಬಸವರಾಜ, ಪವಾಡಿ ಮಂಜುನಾಥ, ದೇವಸ್ಥಾನ ಸಮಿತಿಯ ಅನ್ವೇರಿಶ್ರೀನಿವಾಸ, ಶಾಸಕರ ಆಪ್ತ ಸಹಾಯಕ ಬ್ಯಾಟಿ ನಾಗರಾಜ ಸೇರಿದಂತೆ ಹಲವರು ಶಾಸಕರ ಜೊತೆ ಭೂಮಿಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು.
ಪೂಜಾರಿ ಸಂತೋಷ್ ಪೌರೋಹಿತ್ಯ ನಡೆಸಿಕೊಟ್ಟರು.
- ಹುಳ್ಳಿಪ್ರಕಾಶ, ಸಂಪಾದಕರು, ಸುನಾಮಿನ್ಯೂಸ್, ಬೆಂಗಳೂರು.