- ಹುಳ್ಳಿಪ್ರಕಾಶ, ಸಂಪಾದಕರು
* ಸುನಾಮಿನ್ಯೂಸ್, ಏಪ್ರಿಲ್,2
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಅಧ್ಯಕ್ಷ ಹುದ್ದೆ ತಮ್ಮ ಕಬ್ಜ ದಿಂದ ಕೈ ಜಾರಿ, ವಿರೋಧಿಗಳ ಬುಟ್ಟಿಗೆ ಬಿಳದಂತೆ ಆರೇಳು ತಿಂಗಳಿನಿಂದಲೇ ಎಐಸಿಸಿ ಮಟ್ಟದಲ್ಲಿ ಡಿಸಿಎಂ ಡಿಕೆ.ಶಿವಕುಮಾರ ತೀವ್ರ ಕಟ್ಟೇಚ್ಚರ ವಹಿಸಿದ್ದಾರೆ. ಅದಕ್ಕಾಗಿ ಪಕ್ಷದ ವರಿಷ್ಠರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ,ರಾಹುಲ್ ಗಾಂಧಿ ಅವರ ಮನಸ್ಸುಗಳು ತಮ್ಮ ಪದತ್ಯಾಗ ಬಯಸುವ ವಿರೋಧಿಗಳ ಪರ ನಿಲ್ಲದಂತೆ ತಮಗೆ ಗೊತ್ತಿರುವ ಎಲ್ಲಾ ಪಟ್ಟುಗಳನ್ನು ಪ್ರಯೋಗಿಸುತ್ತಲೇ, ವರಿಷ್ಠರು ತಮ್ಮ ಪರವಾಗಿಯೇ ಇರುವಂತೆ ಪರಿಸ್ಥಿತಿಯನ್ನು ನಿರ್ಮಾಣಮಾಡಿಕೊಂಡು ಬರುತ್ತಿದ್ದಾರೆ.
ಆಗೇನೆ ತಮ್ಮ ವೈರಿಗಳ ಪಡೆ ರಾಜ್ಯದಲ್ಲಿ ಮತ್ತು ಹೈಕಮಾಂಡ್ ಮಟ್ಟದಲ್ಲಿ ತಮ್ಮ ನಾಯಕತ್ವಕ್ಕೆ ಹಾಕುತ್ತೀರುವ ಘಾಟಿ ಸವಾಲುಗಳಿಗೆ ಸಮಯೋಚಿತವಾದ ಪ್ರತಿ ದಾಳಗಳನ್ನು ಉರುಳಿಸುವ ಮೂಲಕ ದೆಹಲಿಯ ಹೈಕಮಾಂಡ್ ಮಟ್ಟದಲ್ಲಿ ವಿರೋಧಿಗಳ ಪ್ರತಿತಂತ್ರ ಮೆಲುಗೈ ಆಗದಂತೆ ಎಐಸಿಸಿ ಸುತ್ತಲೂ ತಮ್ಮ ಪರವಾದ ಪಹರೆಯನ್ನು ಅತ್ಯಂತ ಬಿಗಿಗೊಳಿಸಿದ್ದಾರೆ ಡಿಕೆಶಿ!
ಇತ್ತ ಡಿಕೆ.ಶಿವಕುಮಾರ ಅವರನ್ನು ಪಿಸಿಸಿ ಗಾದಿ ಯಿಂದ ಕೆಳಗಿಳಿಸಿಯೇ ಸರಿ ಎಂದು ಪಿಡ್ಲೂಡಿ ಸಚಿವ ಸತೀಶಜಾರಕೀಹೊಳಿ, ಸಹಕಾರ ಮಂತ್ರಿ ಕೆಎನ್.ರಾಜಣ್ಣ ರವರು ಗೆರಿಲ್ಲಾ ಯುದ್ಧ ತಂತ್ರ ಮತ್ತು ಚಾಣಕ್ಯ ನೀತಿ ಈ ಎರಡು ಪಥದಲ್ಲೂ ತಮ್ಮ ಹೋರಾಟವನ್ನು ತೀವ್ರವಾಗೊಳಿಸುವ ಮೂಲಕ ಪಿಸಿಸಿ ಅಧ್ಯಕ್ಷ ಹುದ್ದೆಯನ್ನು ಪಡೆಯಲು ಇಲ್ಲವೆ ತಮ್ಮ ಹಿಡಿತವನ್ನು ಸಾಧಿಸಲು ಈ ಹೊತ್ತಿನಲ್ಲೂ ಪಿಸಿಸಿಕದನವನ್ನು ಸಾಕಷ್ಟು ತುರುಸುಗೊಳಿಸಿದ್ದಾರೆ.
ಕೆಪಿಸಿಸಿ ಹುದ್ದೆಯ ಮೇಲೆ ನಿಯಂತ್ರಣವನ್ನು ಸಾಧಿಸಲು ಆರಂಭವಾಗಿರುವ ಈ ಸಮರದಲ್ಲಿ ಉಪಮುಖ್ಯಮಂತ್ರಿ ಡಿಕೆಶಿವಕುಮಾರ ತಮ್ಮ ಪಟ್ಟವನ್ನು ರಕ್ಷಿಸಿಕೊಂಡು, ಎದುರಾಳಿಗಳನ್ನು ಹಿಮ್ಮೆಟ್ಟುತ್ತಾರೋ? ಇಲ್ಲ ಜಾರಕಿಹೊಳಿ, ರಾಜಣ್ಣನವರ ಹೊಡೆತಕ್ಕೆ ಉರುಳುವರೋ? ಈಗ ಶುರುವಾಗಿರುವ ಈ ಜಿದ್ದಾ,ಜಿದ್ದಿ ಹೋರಾಟದಲ್ಲಿ ಅಂತಿಮ ಮೆಲುಗೈ ಸಾಧಿಸುವರ್ಯಾರು!? ಎನ್ನುವ ಕುತೂಹಲ ರಾಜ್ಯದ ಜನತೆಯಲ್ಲಿ ದಿನ,ದಿನಕ್ಕೂ ಹೆಚ್ಚುವಂತೆ ಮಾಡಿರುವುದಂತು ದಿಟವಿದೆ.
ಇತ್ತ ಪಿಸಿಸಿ ಮೇಲಿನ ಹಿಡಿತಕ್ಕಾಗಿ ಡಿಕೆ-ಜಾರಕಿಹೊಳಿ ಮಧ್ಯೆ ಶುರುವಾಗಿರುವ
ಈ ರಣಭಯಂಕರ ಕದನ ಭೀಕರತೆ ಪಡೆದುಕೊಂಡಿರುವಾಗಲೇ ಇತ್ತ ಇದ್ದಕ್ಕಿದ್ದಂತೆಯೇ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ)ಯ ಅಧ್ಯಕ್ಷ ಹುದ್ದೆಗೆ ಬಳ್ಳಾರಿ ಸಂಸದರು, ಸಿಎಂ ಸಿದ್ದರಾಮಯ್ಯನವರ ಪರಮಾಪ್ತರಾದ ಈ.ತುಕಾರಾಂ ಅವರ ಹೆಸರು ಯುಗಾದಿ ದಿನ ದಂದೇ ಮುನ್ನೆಲೆಗೆ ಬಂದು ನಿಂತಿರುವುದು ಬಲು ಇಂಟರೆಸ್ಟಿಂಗ್ ಆಗಿದೆ.
ಇದಕ್ಕಿಂತಲೂ ಬಲು ರೋಚಕ ಸುದ್ದಿ ಎಂದರೇ
ನಿಮ್ಮ ಹೆಸರು ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಕೇಳಿ ಬರ್ತಾಯಿದೆ, ಹುದ್ದೆ ಕೊಟ್ಟರೆ ನೀವು ಒಪ್ಪಿಕೊಳ್ಳುತ್ತೀರಾ? ಎಂದು ಬಳ್ಳಾರಿ ನಗರದಲ್ಲಿ ಮಾಧ್ಯಮದವರು ಪ್ರಶ್ನೀಸಿದಾಗ “ಪಕ್ಷದ ಹೈಕಮಾಂಡ್ ಯಾವುದೇ ಹೊಸ ಜವಾಬ್ದಾರಿ ಒಪ್ಪಿಸಿದರೆ ಅದನ್ನು ನಿಭಾಯಿಸಲು ನಾನು ಸಿದ್ಧನಿದ್ದೇನೆ’ ಎನ್ನುವ ಮೂಲಕ ಅವಕಾಶ ಸಿಕ್ರೇ ಪಿಸಿಸಿಯ ಕಾರ್ಯಭಾರ ಹೊತ್ತುಕೊಳ್ಳಲು ಸಿದ್ದ”. ಎನ್ನುವ ಉತ್ತರವನ್ನು ಬಳ್ಳಾರಿ ಸಂಸದ ತುಕಾರಾಂ ಅವರು ನೀಡಿರುವುದು ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಹುದ್ದೆಯ ರಾಜಕಾರಣದ ಕದನವನ್ನು ರೋಚಕದ ತಿರುವಿಗೆ ಬಂದು ನಿಲ್ಲುವಂತೆ ಮಾಡಿದೆ.
ಯುಗಾದಿ ಹಬ್ಬದ ದಿನದಂದೆ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಸಾರಥಿಯಾಗಿ ತುಕಾರಾಂ ಹೆಸರು ದಿಢೀರನೇ ಪ್ರಚಲಿತಕ್ಕೆ ಬಂದಿರುವುದನ್ನು ನೋಡಿದರೇ, ಬಹುಶಃ ಕರ್ನಾಟಕ ಕಾಂಗ್ರೆಸ್ ಸಾರಥ್ಯ ದಿಂದ ಡಿಕೆ.ಶಿವಕುಮಾರ ಅವರನ್ನು ಪದಚ್ಯುತಿಗೊಳಿಸುವಂತಹ ಕಾರ್ಯ ಅಂತಿಮ ಘಟ್ಟಕ್ಕೆ ಬಂದು ನಿಂತಿರ ಬಹುದೇ!? ಎನ್ನುವ ಕುತುಹಲದ ಪ್ರಶ್ನೆ ರಾಜ್ಯ ರಾಜಕಾರಣದಲ್ಲಿ ಬಲವಾಗಿಯೇ ಹುಟ್ಟಿಕೊಂಡಿದೆ.
ಇದೇ ವೇಳೆ ರಾಜ್ಯದಲ್ಲಿ ಅಸೆಂಬ್ಲಿ ಎಲೇಕ್ಷನ್ ಗೆ ಇನ್ನೂ ಮೂರು ವರ್ಷ ಬಾಕಿ ಇರಬಹುದು ಆದರೇ ಪ್ರದೇಶ ಕಾಂಗ್ರೆಸ್ ಸಮಿತಿಯ ಹಿಡಿತ ತಮ್ಮ ಬಿಗಿ ಮುಷ್ಠಿಯಲ್ಲಿದ್ದರೇ ಚೆನ್ನ ಎನ್ನುವ ಕಾರಣಕ್ಕೆ ತಮ್ಮ ಪರಮಾಪ್ತರಾಗಿರುವ ಸಂಸದ ಈ.ತುಕಾರಾಂ ಅವರ ಹೆಸರನ್ನು ಮುಂಚೂಣಿಗೆ ಬರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೋಡಿಕೊಂಡಿರಲೂ ಬಹುದೇನೋ!?
ಎನ್ನುವ ಪ್ರಶ್ನೆಗಳ ಸರಮಾಲೆ ಕರ್ನಾಟಕ ವರ್ತಮಾನ ರಾಜಕಾರಣದಲ್ಲಿ ಈಗಾಗಲೇ ಜನ್ಮತಾಳಿದೇ ಕೂಡ!
ಈ ನಡುವೆ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಸದ್ಯ ಡಿಸಿಎಂ ಡಿಕೆ.ಶಿವಕುಮಾರ ಇದ್ದಾರೆ. ಅವರನ್ನು ಪದಚ್ಯುತಿಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಂಪುಟದಲ್ಲಿರುವ ವಾಲ್ಮೀಕಿ ಜನಾಂಗಕ್ಕೆ ಸೇರಿದ ಇಬ್ಬರು ಪ್ರಭಾವಿ ಸಚಿವರುಗಳಾದ ಸತೀಶ್ ಜಾರಕಿಹೊಳಿ ಮತ್ತು ಕೆಎನ್.ರಾಜಣ್ಣ ಸಾಕಷ್ಟು ಸರ್ಕಸ್ ಮಾಡುತ್ತೀದ್ದು, ಅವಕಾಶ ಸಿಕ್ರೇ ಕೆಪಿಸಿಸಿಯ ಸಾರಥ್ಯದ ನೋಗ ಹೋರಲು ಈ ಇಬ್ಬರು ತಮ್ಮ ಹೆಗಲುಗಳನ್ನು ಹುರಿಮಾಡಿಟ್ಟು ಕೊಂಡಿದ್ದಾರೆ.
ಇಂತಹ ಸನ್ನಿವೇಶದಲ್ಲಿಯೇ ವಾಲ್ಮೀಕಿ ಜನಾಂಗದಲ್ಲಿ ಮತ್ತು ರಾಜ್ಯ ರಾಜಕಾರಣದಲ್ಲಿ ವಿವಾದರಹಿತ ನಾಯಕರು ಆಗಿರುವ ಬಳ್ಳಾರಿ ಲೋಕಸಭಾ ಸದಸ್ಯರಾದ ಈ.ತುಕಾರಾಂ ಹೆಸರು ಮುನ್ನಲೆಗೆ ಬಂದು ನಿಂತಿರುವುದು ಬಲು ಇಂಟರೆಸ್ಟಿಂಗ್ ಆಗಿದೆ.
ಈ ಎಲ್ಲಾ ವಿದ್ಯಮಾನಗಳ ಮಧ್ಯೆ ಸಿಎಂ ಹಾಗೂ ಡಿಸಿಎಂ ಇಬ್ಬರು ಹಳೇ ಮೈಸೂರು ಪ್ರಾಂತ್ಯದವರಾಗಿದ್ದು ಸರ್ಕಾರದಲ್ಲಿ ಉತ್ತರ ಕರ್ನಾಟಕಕ್ಕೆ ಸಮರ್ಪಕ ಪ್ರಾತಿನಿಧ್ಯ ಇಲ್ಲಾ ಎನ್ನುವ ಕೊರಗಿದೆ.
ಜನಾನುರಾಗಿ ಜನಪ್ರತಿನಿಧಿ ಆಗಿರುವ ಸಂಸದ ಈ.ತುಕಾರಾಂ ಅವರನ್ನು ಕೆಪಿಸಿಸಿ ಅಧ್ಯಕ್ಷ ಗಾದಿಯ ಮೇಲೆ ಪ್ರತಿಷ್ಠಾಪಿಸಿ, ಆ ಮೂಲಕ ಏಕಕಾಲಕ್ಕೆ ಉತ್ತರದ ಜೊತೆಗೆ ಕಲ್ಯಾಣ ಕರ್ನಾಟಕ ಪ್ರಾಂತ್ಯಕ್ಕೂ ಸೂಕ್ತ ಪ್ರಾತಿನಿಧ್ಯವನ್ನು ಕಲ್ಪಿಸುವ ಸಾಧ್ಯತೆಯು ಕೂಡ ಈ.ತುಕಾರಾಂ ಹೆಸರು ದಿಢೀರ್ ಮುನ್ನೆಲೆಗೆ ಬಂದು ನಿಲ್ಲಲ್ಲು ಸಕಾರಣವೂ ಆಗಿರಲೂಬಹುದು.
* ತುಕಾರಾಂ ಸೂಕ್ತ ಅಭ್ಯರ್ಥಿ:
ಹೈಕಮಾಂಡ್ ಯಾವುದೇ ಹೊಸ ಜವಾಬ್ದಾರಿ ವಹಿಸಿದ್ರೂ ಅದನ್ನು ನಿಭಾಯಿಸಲು ಸಿದ್ದ ಎಂದು ಸಂಸದ ತುಕಾರಾಂ ಮಾಧ್ಯಮದ ಮುಂದೆ ನೀಡಿರುವ ಹೇಳಿಕೆ ಬೆನ್ನಲ್ಲೇ, ‘ ಸುನಾಮಿನ್ಯೂಸ್” ಕರ್ನಾಟಕದ ವಿವಿಧ ಜಿಲ್ಲೆ, ತಾಲೂಕಿನ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರನ್ನು ಸಂಪರ್ಕಿಸಿದಾಗ
“ತುಕಾರಾಂ ಅವರು ಪಿಸಿಸಿ ಅಧ್ಯಕ್ಷತೆಗೆ ಅತ್ಯಂತ ಸೂಕ್ತವಾದ ಅಭ್ಯರ್ಥಿ. ಜಾತಿ, ವಿದ್ಯಾಹರ್ತೆ, ರಾಜಕೀಯ ಅನುಭವಗಳನ್ನು ಲೆಕ್ಕ ಹಾಕಿದರೇ ಎಲ್ಲಾ ವಿಭಾಗಗಳಲ್ಲೂ ತುಕಾರಾಂ ಯಾವುದರಲ್ಲೂ ಕಮ್ಮಿ ಇಲ್ಲ. ಅವರಿಗೆ ಪ್ರದೇಶ ಕಾಂಗ್ರೆಸ್ ಸಾರಥಿ ಪಟ್ಟವನ್ನು ಪಟ್ಟಗಟ್ಟಿದರೇ ಪಕ್ಷದ ಸಂಘಟನೆಗೆ ಒಳ್ಳೆಯದು” ಎನ್ನುವ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಸ್ನಾತಕೋತ್ತರ ಪದವಿಧರರು, ಸತತ ನಾಲ್ಕು ಬಾರಿ ಶಾಸಕರಾಗಿ ಗೆದ್ದು, ಒಂದು ಸಲ ಮಂತ್ರಿ, ಶಾಸಕಾಂಗ ಪಕ್ಷದ ಕಾರ್ಯದರ್ಶಿ ಆಗಿ, 2024 ರಿಂದ ಲೋಕಸಭೆಗೂ ಆಯ್ಕೆಗೊಂಡಿರುವ, ಅದರಲ್ಲೂ ಪರಿಶಿಷ್ಟ ಪಂಗಡದ ನೇತಾರರು ಆಗಿರುವ, ಸ್ವಚ್ಛ, ಸರಳ,ಸಜ್ಜನಿಕೆಯ ತುಕಾರಾಂ ಪ್ರದೇಶ ಕಾಂಗ್ರೆಸ್ ಸಮಿತಿಯ ಸಾರಥಿ ಆದರೇ
ರಾಜ್ಯ ಕಾಂಗ್ರೆಸ್ ರಾಜಕಾರಣದಲ್ಲಿ ಹೊಸ ಮನ್ವಂತರದ ಯುಗವೊಂದು ಆರಂಭವಾಗಲಿದೆ ಎನ್ನುವ ಮಾತುಗಳು, ವಿಶ್ಲೇಷಣೆಗಳು ಕರ್ನಾಟಕ ರಾಜಕಾರಣದಲ್ಲಿ ಸದ್ಯ ಜೋರಾಗಿವೆ.