- ಹುಳ್ಳಿಪ್ರಕಾಶ, ಸಂಪಾದಕರು
* ಸುನಾಮಿನ್ಯೂಸ್, ಕೂಡ್ಲಿಗಿ, ಏ,10
ಸಾಧನೆ ಮಾಡಲು ಬಡತನ ಎಂಬುದು ಅಡ್ಡಿ ಬರುವುದಿಲ್ಲ. ಸಾಧಿಸುವ ಗುರಿ ಒಂದಿದ್ದರೇ ಬೆಟ್ಟದಂತಹ ಸಂಕಷ್ಟಗಳು ಎದುರಾದರೂ ಅವುಗಳನ್ನು ಧಾಟಿ ಗುರಿ ಸಾಧಿಸಿ ತೋರಿಸಬಹುದು ಎಂಬುದಕ್ಕೆ ಪಿಯುಸಿ ದ್ವೀತಿಯ ವರ್ಷದ ಕಲಾ ವಿಭಾಗದ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನಿ ಆಗಿರುವ ಸಂಜನಾ ಬಾಯಿ ಇಡೀ ಕರ್ನಾಟಕದ ವಿದ್ಯಾರ್ಥಿ ವೃಂದಕ್ಕೆ ಮಾದರಿಯಾಗಿದ್ದಾರೆ ಎಂದು ಕೂಡ್ಲಿಗಿ ಕ್ಷೇತ್ರದ ಶಾಸಕರಾದ ಡಾ.ಎನ್ಟಿ ಶ್ರೀನಿವಾಸ ಅವರು ವಿದ್ಯಾರ್ಥಿ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಬುಧವಾರ ವಿದ್ಯಾರ್ಥಿನಿ ಸ್ವಗ್ರಾಮ ಗುಂಡಾ ನಿಲ್ದಾಣಕ್ಕೆ ಭೇಟಿ ನೀಡಿ ವಿದ್ಯಾರ್ಥಿ ಜೊತೆಗೆ ಅವರ ತಂದೆ,ತಾಯಿ ಅವರನ್ನು ಸನ್ಮಾನಿಸಿದ ಶಾಸಕರು, ವೈಯುಕ್ತಿಕವಾಗಿ 25 ಸಾವಿರ ರೂಪಾಯಿ ನಗದು ಹಾಗೂ ಒಂದು ಲ್ಯಾಪ್ ಟಾಪ್ ನ್ನು ಕೊಟ್ಟು ವಿದ್ಯಾರ್ಥಿನಿಯನ್ನು ಅಭಿನಂದಿಸಿದರು
600 ಅಂಕಗಳಿಗೆ 597 ಅಂಕ ತೆಗೆದುಕೊಂಡಿರುವ ಸಂಜನಾಬಾಯಿ ಅವರ ಸಾಧನೆ ಬಹುದೊಡ್ಡದು ಎಂದು ಕೊಂಡಾಡಿ, ಮುಂದಿನ ವಿದ್ಯಾಭ್ಯಾಸದಲ್ಲಿ ಇನ್ನಷ್ಟು ಉನ್ನತ ಸ್ಥಾನಗಳಿಸಿ, ರಾಜ್ಯ, ದೇಶಕ್ಕೂ ಹೆಸರು ತರುವಂತೆ ಶಾಸಕರು ಶುಭಹಾರೈಸಿದರು.
.
ನನ್ನದು ಪಕ್ಕದ ತಾಲೂಕು ಆದರೇ ನಮ್ಮ ತಂದೆಯವರಾದ ದಿವಂಗತ ಎನ್ ಟಿ. ಬೊಮ್ಮಣ್ಣನವರು ಈಹಿಂದೆ ಮರಿಯಮ್ಮನಹಳ್ಳಿ ಭಾಗ ಸೇರಿದಂತೆ ಅಸ್ಥಿತ್ವದಲ್ಲಿದ್ದ ಕೂಡ್ಲಿಗಿ ಕ್ಷೇತ್ರ ದಿಂದ ಸತತ ಎರಡು ಬಾರಿ ಶಾಸಕರಾಗಿ ಆಯ್ಕೆಗೊಂಡಿದ್ದರು.
ಇಲ್ಲಿನ ಜನರ ಋಣವು ಸದಾ ನಮ್ಮ ಕುಟುಂಬದ ಮೇಲಿದೆ, ಹಾಗಾಗಿ ಸಂಜನಾ ಅವರ ಸಾಧನೆಯನ್ನು ಕೇಳಿದ ತಕ್ಷಣ ಅವರಿಗೆ ಭೇಟಿಯಾಗಬೇಕು ಎಂಬ ನಿರ್ಧಾರದೊಂದಿಗೆ ಇಂದು ಗ್ರಾಮಕ್ಕೆ ಭೇಟಿಕೊಟ್ಟೆ ಎಂದು ಶಾಸಕ ಡಾ.ಎನ್ಟಿ ಶ್ರೀನಿವಾಸ ಪತ್ರಕರ್ತರಿಗೆ ತಿಳಿಸಿದರು.
ನಮ್ಮ ತಂದೆಯವರು ಸಾಕಷ್ಟು ಓದಿದವರಲ್ಲ. ಆದರೇ ಅವರು ಶಿಕ್ಷಣ ಪ್ರೇಮಿಗಳಾಗಿದ್ದರು. ಬಹು ಮುಖ್ಯವಾಗಿ ಗ್ರಾಮಾಂತರ ಪ್ರದೇಶದ ಮಕ್ಕಳು ಶಿಕ್ಷಣ ದಿಂದ ವಂಚಿತರಾಗ ಬಾರದು ಎನ್ನುವ ಕಳಕಳಿ ಅವರದ್ದಾಗಿತ್ತು. ಇಂತಹ ಉನ್ನತ ಉದ್ದೇಶದೊಂದಿಗೆ ಅವತ್ತಿನ ಕಾಲದಲ್ಲಿಯೇ ನರಸಿಂಹಗಿರಿ ವಿದ್ಯಾ ಸಂಸ್ಥೆ ಸ್ಥಾಪಿಸಿ, ಹಲವು ಹಳ್ಳಿಗಳಲ್ಲಿ ಪ್ರೌಢಶಾಲೆಗಳನ್ನು ತೆರೆದು ಗ್ರಾಮಾಂತರ ಪ್ರದೇಶದಲ್ಲಿ ಮಕ್ಕಳಿಗೆ ಹೈಸ್ಕೂಲ್ ಶಿಕ್ಷಣದ ಸೌಲಭ್ಯವನ್ನು ಕಲ್ಪಿಸಿಕೊಟ್ಟಿದ್ದರು. ನಾನು ಮತ್ತು ಕುಟುಂಬ ಸಹ ನಮ್ಮ ತಂದೆಯವರಂತೆ ಶಿಕ್ಷಣದ ಪ್ರಗತಿಗೆ ದುಡಿಯುತ್ತೇವೆ ಎಂದರು ಶಾಸಕ ಡಾ.ಶ್ರೀನಿವಾಸ.
ಸಂಜನಾಬಾಯಿ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಯಾವುದೇ ರೀತಿಯಸಮಸ್ಯೆ ಉಂಟಾಗದಂತೆ ಸದಾ ನಾನು ಆಕುಟುಂಬದ ಜೊತೆಗಿದ್ದು ನೆರವು ನೀಡುತ್ತೇನೆ ಎಂದು ಇದೇ ವೇಳೆ ಶಾಸಕರು ವಿದ್ಯಾರ್ಥಿನಿ ಹಾಗು ಅವರ ಕುಟುಂಬಕ್ಕೆ ಭರವಸೆ ಇತ್ತರು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು ಕೂಡ್ಲಿಗಿ ಕ್ಷೇತ್ರದ ಶಾಸಕರ ಶಿಕ್ಷಣ ಪ್ರೇಮವನ್ನು ಹಾಗೂ ವಿದ್ಯಾರ್ಥಿಗಳಿಗೆ ಅವರು ನೀಡುತ್ತಿರುವ ಪ್ರೋತ್ಸಾಹವನ್ನು ನೆನೆದಯ, ಶಾಸಕರ ವ್ಯಕ್ತಿತ್ವವನ್ನು ಕೊಂಡಾಡಿದರು.
ಕೂಡ್ಲಿಗಿ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಕಾವಲಿ ಶಿವಪ್ಪನಾಯಕ ಸಹಿತ ಹಲವರು ಶಾಸಕರ ಜೊತೆಯಲ್ಲಿದ್ದರು.
- ವರದಿ: ತಿಪ್ಪೇಸ್ವಾಮಿ, ಮೀನಕೆರಿ.