Welcome to sunamipatrike   Click to listen highlighted text! Welcome to sunamipatrike
Thursday, May 22, 2025
HomeUncategorizedಕಡ್ಲಬಾಳು ರಸ್ತೆ; ಯಾಮಾರಿದರೇ 'ಮೇಲಕ್ಕೆ' ಫ್ರೀ ವೀಸಾ! ಶಾಸಕರು ಬದಲಾಗಿರ ಬಹುದು. ಆದ್ರೇ ಭ್ರಷ್ಟ ಇಂಜಿನಿಯರ್ಸ್,...

ಕಡ್ಲಬಾಳು ರಸ್ತೆ; ಯಾಮಾರಿದರೇ ‘ಮೇಲಕ್ಕೆ’ ಫ್ರೀ ವೀಸಾ! ಶಾಸಕರು ಬದಲಾಗಿರ ಬಹುದು. ಆದ್ರೇ ಭ್ರಷ್ಟ ಇಂಜಿನಿಯರ್ಸ್, ಕಮಾಯಿ ಗುತ್ತಿಗೆದಾರರ ತಿನ್ನಾಟದ ವ್ಯವಸ್ಥೆಯ ಅಡಿಗಲ್ಲು ಸಡಿಲಿಲ್ಲ!

  • ಹುಳ್ಳಿಪ್ರಕಾಶ, ಸಂಪಾದಕರು
    *ಸುನಾಮಿ ನ್ಯೂಸ್
    ಹಗರಿಬೊಮ್ಮನಹಳ್ಳಿ, ಅ19
    ‘ ಪಟ್ಟಣದ ರಸ್ತೆಗಳು ಸೇರಿದಂತೆ, ಇಲ್ಲಿಂದ ತಾಲೂಕಿನ ಮತ್ತು ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸಂಚಾರಕ್ಕೆ ಯೋಗ್ಯವಾಗದಷ್ಟು ನಾಗರೀಕರ ಜೀವಕ್ಕೆ ಮಾರಕವಾಗುವಂತೆ ಮಹಾನ್ ಗುಂಡಿಗಳ ಅಪಾಯಕಾರಿ ರಸ್ತೆಗಳಾಗಿ ಮಾರ್ಪಟ್ಟಿವೆ !

ಈಗ ಸುರಿಯುತ್ತೀರುವ ಮಳೆಗೂ ಮುನ್ನವೇ ರಸ್ತೆಗಳ ಸಂಚಾರ ನರಕಯಾತನೆ ಆಗುವಷ್ಟು ಅದ್ವಾನಗೊಂಡಿತ್ತು. ಮಳೆಯಿಂದಾಗಿ ಈ ಅದ್ವಾನ ತೀವ್ರತರಹ ಉಲ್ಬಣಗೊಂಡಿದ್ದು, ಜನರು ಜೀವವನ್ನು ಅಂಗೈಯಲ್ಲಿಯೇ ಹಿಡಿದು ಪ್ರಯಾಣಿಸುವಂತಾಗಿದೆ.

ಈ ಕ್ಷೇತ್ರದಲ್ಲಿ ಶಾಸಕರು ಬದಲಾಗಿರ ಬಹುದು. ಆದರೇ ಹತ್ತುಗಳಿಂದ ಇದ್ದಂತಹ ಭ್ರಷ್ಟ ಅಧಿಕಾರಿಗಳು, ಕಮಾಯಿ ಗುತ್ತಿಗೆದಾರರ ಸಂಗಮ ಕ್ಷೀಣಿಸಿಲ್ಲ! ಗುತ್ತಿಗೆದಾರರಲ್ಲಿ ಒಂದಿಷ್ಟುಹೆಸರುಗಳು ಬದಲಾಗಿರ ಬಹುದಷ್ಟೇ ಆದರೇ ಈ ಹಿಂದೆ ಅಸ್ತಿತ್ವದಲ್ಲಿದ್ದಂತಹ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಖುದ್ದು ಶ್ರೀರಾಮನೇ ಆಳ್ವಿಕೆ ಮಾಡಿದರೂ ತನ್ನ ಪ್ರಜೆಗಳ ಕಲ್ಯಾಣಕ್ಕೆ ಜಾರಿಗೊಳಿಸಿದ ಸೌಲಭ್ಯಗಳು ಸಮರ್ಪಕವಾಗಿ ತಲುಪದ ಕಾರಣಕ್ಕೇನೆ ‘ಶ್ರೀರಾಮ ಆಳಿದರೂ, ನಮಗೆ ಮಾತ್ರ ರಾಗಿ ಬೀಸುವುದು ತಪ್ಪಲಿಲ್ಲ’ ಎನ್ನುವ ನೋವಿನ, ಅಸಮಾಧಾನದ ಮಾತುಗಳು ರಾಮಾಯಣದ ಕಾಲದಲ್ಲಿಯೇ ನಾಗರೀಕರ ನಡುವೆ ಜನಿಸಿ, ಇಂದಿನ ಸೋಷಿಯಲ್ ಮಿಡಿಯಾದ ಅರ್ಭಟದ ಯುಗದಲ್ಲೂ ಮೇನ್ ಸ್ಟ್ರೀಮ್ ನಲ್ಲಿ ಅಸ್ತಿತ್ವ ಉಳಿಸಿಕೊಂಡಿರುವುದೇ ಭ್ರಷ್ಟಾಚಾರ ಮತ್ತು ಕಮಾಯಿಗೆ ಕಾಲಗಳ ಮೀತಿ ಎನ್ನುವುದಕ್ಕೆ ಜೀವಂತ ಸಾಕ್ಷಿ.

ಈ ಹಿಂದಿನ ಹತ್ತು ವರ್ಷದಲ್ಲಿ ಈ ಕ್ಷೇತ್ರಕ್ಕೆ ತುಂಗಾಭದ್ರಾದ 19ನೇ ಕ್ರಸ್ಟ್ ಗೇಟ್ ಮುಗುಚಿ ಬಿದ್ದಾಗ ರಭಸವಾಗಿ ಹರಿದ ನೀರಿನಂತೆ ಈ ಕ್ಷೇತ್ರಕ್ಕೆ ಸರ್ಕಾರದ ಅನುದಾನ ಹರಿದು ಬಂದಿದೆ ಎನ್ನುವ ಮಾತುಗಳು ಈಹೊತ್ತಿನಲ್ಲೂ ವೇದಿಕೆಯ ಮೇಲಿಂದ ಕೇಳುತ್ತಲೇ ಇರುತ್ತವೆ.

ಆದರೇ ಈ ಕ್ಷೇತ್ರ ಮತ್ತು ತಾಲೂಕಿನಲ್ಲಿ ಹಡಲೇದು ಹೋಗಿರುವ ರಸ್ತೆಗಳ ಸಂಪರ್ಕ ಜಾಲದ ಕೆಟ್ಟ ಸ್ಥಿತಿಯನ್ನು ನೋಡಿದಾಗ ಹರಿದು ಬಂದ ಅನುದಾನ ಎಲ್ಲಿಗೆ ಹೋಗಿ ಜಮೆ ಆಯ್ತು!? ಎನ್ನುವುದು ಯಕ್ಷನ ಪ್ರಶ್ನೆ ಆಗಿ ಕಾಡುತ್ತದೆ.

ಆದರೇ, ಈ ಪಟ್ಟಣದ ಜನನೀಬೀಡ ಸ್ಥಳಗಳಲ್ಲಿ ಗುತ್ತಿಗೆದಾರರ ಮಾಲಿಕತ್ವದಲ್ಲಿ ಎದ್ದಿರುವ ವೈಭವಪೇತ ಲಾಡ್ಜ್ , ಕಮರ್ಷಿಯಲ್ ಕಾಂಪ್ಲೆಕ್ಸ್ ಗಳು, ಕ್ಷೇತ್ರದ ಜೊತೆಗೆ ಅಕ್ಕ,ಪಕ್ಕದ ಪಟ್ಟಣಗಳಲ್ಲಿ ಬೇನಾಮಿ ಹೆಸರಿನಲ್ಲಿ ಖರಿದಿಸಿರುವ ಸೈಟ್ ಗಳು, ಹಳ್ಳಿಗಳಲ್ಲಿನ ಹೊಲ,ಗದ್ದೆಗಳು ಅನುದಾನ ಎಲ್ಲಿ ಹೊಯ್ತು ಎನ್ನುವುದಕ್ಕೆ ಉತ್ತರ ಒದಗಿಸುತ್ತವೆ.

ಆಗೇನೆ ಹತ್ತು ವರ್ಷದ ನಂತರ ಕ್ಷೇತ್ರದಲ್ಲಿ ಶಾಸಕರ ಹೆಸರು ಬದಲಾಗಿರ ಬಹುದು, ಆದರೇ ಭ್ರಷ್ಟ ಮತ್ತು ಕಮಾಯಿ ಅಧಿಕಾರಿ, ಗುತ್ತಿಗೆದಾರರ ವ್ಯವಸ್ಥೆಗೆ ಯಾವುದೇ ಅಭದ್ರತೆ ಒದಗಿ ಬಂದಿಲ್ಲ. ಇದಕ್ಕೆ ಜೀವಂತ ಸಾಕ್ಷಿ ಹೇಳುತ್ತೀವೆ ‘ ತಗ್ಗಿನ ಸಾಮ್ರಾಜ್ಯದ ರಸ್ತೆಗಳು’

ಈ ಕುರಿತಂತೆ ‘ಸುನಾಮಿ ನ್ಯೂಸ್’ ನಲ್ಲಿ ಸಚಿತ್ರವಾದ ವರದಿಗಳು ಪ್ರಕಟವಾಗಲಿವೆ. ಆರಂಭಿಕವಾಗಿ ಈ ಪಟ್ಟಣದ ಅರಾಧ್ಯದೇವತೆ ನಾಣಿಕೆರಿ ಶ್ರೀಗಾಳೆಮ್ಮದೇವಿ ದೇವಸ್ಥಾನ ದಿಂದ ಬಾಚಿಗೊಂಡನಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಅದ್ವಾನಗಳ ಬಗ್ಗೆ ವಿವರಿಸಲಾಗಿದೆ.

ಪಟ್ಟಣದ ನಾಣಿಕೆರಿ ಶ್ರೀಗಾಳೆಮ್ಮ ದೇವಸ್ಥಾನ ದಿಂದ ಬಾಚಿಗೊಂಡನಹಳ್ಳಿಗೆ ಸಂಪರ್ಕ ಕಲ್ಪಿಸುವ ಜಿಲ್ಲಾ ಮುಖ್ಯ ರಸ್ತೆ(ಡಿಎಂಆರ್ ರೋಡ್)ಯ ಮೇಲೆ ಸಂಚಾರಿಸುವ ದ್ವಿಚಕ್ರ ಮತ್ತು ಆಟೋ ಸವಾರರು ಕೊಂಚ ಮೈಮರೆತರೇ ಸಿದಾ ಮಸಣಕ್ಕೇನೆ ‘ಉಚಿತ ವೀಸಾ’ ಖಚಿತ ಎನ್ನುವಷ್ಟರ ಮಟ್ಟಿಗೆ ಅಪಾಯಕಾರಿ ಆಗಿದೆ!

ಅದರಲ್ಲೂ ಕಡ್ಲಬಾಳು ಗ್ರಾಮದ ವರೆಗಿನ ಸುಮಾರು ಐದು ಕೀಲೋ ಮೀಟರ್ ರಸ್ತೆ ಮೇಲೆ ಅಡಿ, ಅರ್ಧ ಅಡಿಗೊಂದರಂತೆ ಕುಣಿಗಳು ಬಿದ್ದಿದ್ದು ವಾಹನ ಸವಾರರು ಸರ್ಕಸಿನ ‘ತಂತಿಯ ಮೇಲಿನ ನಡಿಗೆ’ ತರಹವೇ ವಾಹನ ಚಾಲನೆ ಮಾಡಿದರಷ್ಟೇ ಸೇಫ್ ಆಗಿ ತಮ್ಮ ಗಮ್ಯವನ್ನು ಸೇರಲು ಸಾಧ್ಯ.

ಮಳೆಗಾಲಕ್ಕೂ ಮುನ್ನವೇ ಈ ರಸ್ತೆಯಲ್ಲಿ ತಗ್ಗು,ಕುಣಿಗಳ ಜುಗಲ ಬಂದಿ ನಿರ್ಮಾಣಗೊಂಡಿತ್ತು. ಇತ್ತಿಚಿಗೆ ಬಿಟ್ಟು, ಬಿಡದೆ ಸುರಿಯುತ್ತೀರುವ ಮಳೆಯಿಂದಾಗಿ ತಗ್ಗು, ಕುಣಿಗಳಲ್ಲಿ ನೀರು ತುಂಬಿ, ರಸ್ತೆ ಎನ್ನುವುದು ಹೊಂಡದಂತೆ ಮಾರ್ಪಾಟ್ಟಿದೆ.

ಬ್ಯಾಲಾಳು, ಕಡ್ಲಬಾಳು, ಹಗರಿ ಕ್ಯಾದಿಗಿಹಳ್ಳಿ ಕ್ರಾಸ್ ಮೂಲಕ ಬಾಚಿಗೊಂಡನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆ ಸುಮಾರು ಹನ್ನೊಂದು ಕೀಲೋಮೀಟರ್ ಉದ್ದವಿದೆ.

ಈ ರಸ್ತೆಗೆ ಡಾಂಬರ್ ಹಾಕಿ ವರ್ಷಗಳೇ ಕಳೆದಿವೆ. ಇದ್ದ,ಬದ್ಧ ಟಾರ್ ಈಗ ಕಿತ್ತುಹೋಗಿದ್ದು, ರಸ್ತೆ ಎನ್ನುವುದು ಅಸ್ಥಿಪಂಜರದಂತಾಗಿದೆ. ಈ ರಸ್ತೆಯಲ್ಲಿ ನಿರ್ಮಾಣಗೊಂಡಿರುವ ಗುಂಡಿಗಳ ಸಾಮ್ರಾಜ್ಯದಲ್ಲಿ ನೈಜ ರಸ್ತೆಯನ್ನು ಪತ್ತೆ ಹಚ್ಚಿ, ವಾಹನಗಳನ್ನು ನಿಯಂತ್ರಣಕ್ಕೆ ಪಡೆದುಕೊಂಡು ಸೇಫ್ ಡ್ರೈವ್ ಮಾಡುವುದು ಚಾಲಕರಿಗೆ ‘ಮುಡಾ’ ಹಗರಣದಲ್ಲಿ ಸೈಟ್ ಗಳನ್ನು ವಾಪಾಸು ಕೊಟ್ಟಷ್ಟು ಸಲೀಸಲ್ಲ!

ಹೀಗಾಗಿ ಈ ರಸ್ತೆಯ ಮೇಲೆ ಮೊದಲಿಗೆ ಪ್ರಯಾಣಿಸುವ ಚಾಲಕರು ನಾಣಿಕೆರಿ ಗಾಳೆಮ್ಮನನ್ನು ಪ್ರಾರ್ಥಿಸಿ, ತದನಂತರ ಮಾರ್ಗ ಮಧ್ಯೆ ಕೆಪಿಸಿ ವಿದ್ಯುತ್ ಸ್ಥಾವರದ ಬಳಿ ಇರುವ ಶಿವಪ್ಪನಿಗೆ ನಮಿಸಿ, ಮುಂದೆ ಬ್ಯಾಲಾಳು ಗ್ರಾಮ ಧಾಟೀದ ಬಳಿಕ ಬರುವ ರಸ್ತೆ ಬಸಪ್ಪನಿಗೆ ವಂದಿಸುತ್ತಾ, ಕಡ್ಲಬಾಳು ಬರುತ್ತಿದ್ದಂತೆಯೇ ಅಂಜನೇಯನಿಗೆ ವಂದಿಸುತ್ತಾ, ಮುಂದೆ ಗಾಯಿತ್ರಿದೇವಿಗೆ ನಮಸ್ಕಾರಿಸುತ್ತಾ ಸೇಫ್ ಆಗಿ ಮನೆಗೆ ಸೇರಿಕೊಂಡ ಬಳಿಕ ದಾರಿ ಉದ್ದಕ್ಕೂ ಪ್ರಾರ್ಥಿಸಿಕೊಂಡ ಬಂದ ಎಲ್ಲ ದೇವರಿಗಳಿಗೆ ಮತ್ತೋಮ್ಮೆ ದೊಡ್ಡದಾದ ಧೀರ್ಘದಂಡ ನಮಸ್ಕಾರ ಹಾಕುತ್ತಾರೆ.

ಏಕೆಂದರೆ, ಈ ರಸ್ತೆ ಸುಗಮ ಇರಲಿ, ಸಾಮಾನ್ಯ ಸಂಚಾರಕ್ಕೂ ಯೋಗ್ಯವಾಗದಷ್ಟು ಅತ್ಯಂತ ಅದ್ವಾನ ಎದ್ದು ಹೋಗಿದ್ದು, ವಾಹನ ಸವಾರರು ಮತ್ತು ಹಿಂಬದಿಯ ಸವಾರರು ಜೀವವನ್ನು ಅಂಗೈಯಲ್ಲಿಡುಕೊಂಡೇ ಪ್ರಯಾಣಿಸ ಬೇಕು. ಸ್ವಲ್ಪ ಯಮಾರಿದರೇ ಸ್ಪಾಟ್ ನಲ್ಲೇ ಮೇಲಕ್ಕೆ ವೀಸಾ ಸಿದ್ದವಾಗುತ್ತೆ!

ಇತ್ತಿಚಿಗೆ ಸಾಕಷ್ಟು ಅಪಘಾತಗಳು ಈ ರಸ್ತೆ ಮೇಲೆ ಸಂಭವಿಸಿವೆ. ಆದರೇ ಇವುಗಳಲ್ಲಿ ಸಾಕಷ್ಟು ಪ್ರಕರಣಗಳು ಪೊಲೀಸ್ ಠಾಣೆ ಮೆಟ್ಟಿಲು ಹತ್ತಿಲ್ಲ. ಹೀಗಾಗಿ ಅಪಘಾತ, ಸಾವು,ನೋವಿನ ನಿಖರವಾದ ಅಂಕಿ,ಅಂಶಗಳು ಸದ್ಯ ಲಭ್ಯವಿಲ್ಲ.

ಇನ್ನೂ ಪ್ರತಿ ವರ್ಷ ರಸ್ತೆಗಳಲ್ಲಿನ ತಗ್ಗು,ಕುಣಿ, ಗುಂಡಿ ಮುಚ್ಚಲು ಕೋಟ್ಯಾಂತರ ರೂಪಾಯಿ ಹಣ ಲೋಕೋಪಯೋಗಿ ಇಲಾಖೆ ಯಿಂದ ಮಂಜೂರು ಆಗುತ್ತಲೇ ಇರುತ್ತೆ. ಆದರೇ ಬಂದ ಹಣದಲ್ಲಿ ಕನಿಷ್ಠ ಕಾಲು ಭಾಗವಾದರೂ ಪ್ರಮಾಣಿಕವಾಗಿ ವೆಚ್ಚವಾಗಿದ್ದರೇ ಇವತ್ತು ಅಮಾಯಕ ವಾಹನ ಚಾಲಕರು, ಹಿಂಬದಿಯ ಸವಾರರು, ಪ್ರಯಾಣಿಕರುಗಳು ತಮ್ಮ ಜೀವವನ್ನು ತಗ್ಗು,ಗುಂಡಿಗಳಿಗೆ ಎದುರು ಪಣಕ್ಕೀಟ್ಟು ಅಪಾಯಕಾರಿ ರಸ್ತೆ ಮೇಲೆ ಸಂಚರಿಸುವಂತಹ ದುಸ್ಥಿತಿ ಒದಗಿ ಬರ್ತಾಯಿರಲಿಲ್ಲ.

ಸ್ಥಳಿಯ ಲೋಕೋಪಯೋಗಿ, ಜಿಲ್ಲಾಪಂಚಾಯತ್ ಇಲಾಖೆಗಳ ಕಚೇರಿಗಳು ಭ್ರಷ್ಟಾಚಾರದ ಕೂಪಗಳಾಗಿ ಮಾರ್ಪಟ್ಟಿವೆ. ಇಲ್ಲಿರುವ ತಿನ್ನಬಾಕ ಅಧಿಕಾರಿಗಳು, ರಸ್ತೆ ಮೆಂಟೇನ್ ಮಾಡುವ ಗುತ್ತಿಗೆ ಪಡೆಯುವ ಗುತ್ತಿಗೆದಾರರ ಹಣದಾಯಿತನ ಮೇರೆ ಮೀರಿದ್ದು ಇವರ ಕಮಾಯಿತನದ ಮೇಲಾಟಕ್ಕೆ ಸಂಚಾರಕ್ಕೆ ರಸ್ತೆ ಬಳಸುತ್ತೀರುವ ಅಮಾಯಕ ನಾಗರೀಕರು ಪ್ರಾಣ ತೆರಬೇಕಾಗಿದೆ. ಗಾಯಗೊಂಡು ನರಳಾಡುವಂತಾಗಿದೆ.

ಇನ್ನೂ ಕ್ಷೇತ್ರದಲ್ಲಿ ಶಾಸಕರು ಬದಲಾಗಿರ ಬಹುದು ಆದರೇ ಭ್ರಷ್ಟ ಅಧಿಕಾರಿ, ಕಮಾಯಿ ಗುತ್ತಿಗೆದಾರರ ಕಳ್ಳಾಟದ, ಹೊಂದಾಣಿಕೆಯ ವ್ಯವಸ್ಥೆ ಆಗೇನೆ ಮುಂದುವರೆದಿದೆ.

ಇದಕ್ಕೆ ಜೀವಂತ ಸಾಕ್ಷಿಯಾಗಿ ನಿಂತಿದೆ ಸ್ವಲ್ಪ ಅಯತಪ್ಪಿದ್ರೂ ‘ ಮೇಲಕ್ಕೆ ವೀಸಾ’ ಸಿದ್ದ ಎನ್ನುವಂತಿರುವ ಪಟ್ಟಣದ ರಾಮನಗರದ ಹೊರ ವಲಯದ ಬಳಿಯ ನಾಣಿಕೆರಿ ಶ್ರೀ ಗಾಳೆಮ್ಮದೇವಿ ದೇವಸ್ಥಾನದ ಬಳಿ ಯಿಂದ ಬಾಚಿಗೊಂಡನಹಳ್ಳಿಗೆ ಸಂಪರ್ಕ ಕಲ್ಪಿಸುವ ‘ಗುಂಡಿಗಳ ಸಾಮ್ರಾಜ್ಯದ’ ರಸ್ತೆ.

  • ಹುಳ್ಳಿಪ್ರಕಾಶ, ಸಂಪಾದಕರು, ಸುನಾಮಿನ್ಯೂಸ್.
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
Click to listen highlighted text!